Sunday, September 30, 2018

ನಿಜ ಸುಖ ಎಲ್ಲಿದೆ? (Nija sukha ellide?)


ಲೇಖಕರುಸುಬ್ರಹ್ಮಣ್ಯ ಸೋಮಯಾಜಿಬೆಂಗಳೂರು

ಕಳೆದ ಐವತ್ತು ವರ್ಷಗಳಿಂದೀಚೆಗೆ ನಮ್ಮೆಲ್ಲರ ಜೀವನದಲ್ಲಿ, ಮಾತ್ರವಲ್ಲ, ಮಾನವ ಜೀವನದಲ್ಲೇ ಸಾಕಷ್ಟು ಪರಿವರ್ತನೆಗಳಾಗಿವೆ. ನಮ್ಮ ಭಾರತೀಯ ಸಮಾಜದ ಮೇಲೂ ಈ ಪರಿವರ್ತನೆಗಳು ಜೋರಾಗಿಯೇ ಇವೆ. ಮಾಹಿತಿ ತಂತ್ರಜ್ಞಾನದ ಕ್ರಾಂತಿ ಮನುಷ್ಯನ ಬದುಕನ್ನೇ ಹೊಸ ಯುಗದತ್ತ ಕರೆದೊಯ್ದಿದೆ. ಜಾಗತೀಕರಣ ನಮ್ಮನ್ನು ಹೊಸ ಹೊಸ ಉದ್ಯಮಗಳತ್ತ, ಹೊಸ ವಸ್ತುಗಳತ್ತ, ಹೊಸ ಹೊಸ ವ್ಯಕ್ತಿಗಳತ್ತ, ಆಕರ್ಷಿಸಿ ನಮ್ಮ ಚಿಂತನೆಯ ದಿಕ್ಕನ್ನೇ ನವೀನಗೊಳಿಸಿವೆ. ನಮ್ಮ ಕೈಯಲ್ಲಿ ಇಡೀ ಜಗತ್ತನ್ನೇ ಹಿಡಿದಿಡಬಹುದಾದ ಮೊಬೈಲ್ ತಂತ್ರಜ್ಞಾನ ಈಗ ನಮಗೆ ಹಳತಾಗುತ್ತಿದೆ. ಸಾಮಾಜಿಕ ಜಾಲ ತಾಣಗಳು ಜಗತ್ತನ್ನು ಕಿರಿದಾಗಿಸಿವೆ. ನಾವು ಎಲ್ಲೂ ಹೋಗಬೇಕಾಗಿಲ್ಲ. ನಮ್ಮ ನಮ್ಮ ಜಾಗದಲ್ಲೇ ಇಡೀ ಜಗತ್ತನ್ನು ನಿರ್ವಹಿಸಬಲ್ಲಷ್ಟು ತಾಂತ್ರಿಕತೆಯ ಮಾಯಾಲೋಕದಲ್ಲಿ ನಾವೆಲ್ಲರೂ ವಿಹರಿಸುತ್ತಿದ್ದೇವೆ ಎಂದರೆ ಹೆಚ್ಚಾಗದು.
ಹಾಗೆಯೇ ಐವತ್ತು ವರ್ಷಗಳಿಂದೀಚೆಗೆ ಸಮಾಜದಲ್ಲಿ ಅಸಹನೆ, ಆತ್ಮಹತ್ಯೆಗಳು, ಮಾನಸಿಕ ಖಿನ್ನತೆ, ವಿವಾಹ  ವಿಚ್ಛೇದನಗಳು, ಕೌಟುಂಬಿಕ ಕಲಹಗಳು, ದಾಂಪತ್ಯ ಸಮಸ್ಯೆಗಳು, ಇವುಗಳ ಸಂಖ್ಯೆಯೂ ಹೆಚ್ಚಿದೆ. ಹರೆಯದ ಹುಡುಗ ಹುಡುಗಿಯರು ಕ್ಷುಲ್ಲಕ ಕಾರಣಗಳಿಗೆ ಖಿನ್ನತೆಗೊಳಗಾಗುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸಂಬಂಧಗಳಲ್ಲಿ ಚಿಕ್ಕ ವಿಷಯಗಳಿಗಾಗಿ ಬಿರುಕು ಕಾಣಿಸಿಕೊಳ್ಳುತ್ತದೆ. ಏಕೆ ಈ ವಿಪರ್ಯಾಸ. ನಮ್ಮ ಜೀವನದಲ್ಲಿ ಅನುಕೂಲತೆಗಳು ಕಡಿಮೆ ಇದ್ದಾಗಿನ ಸಂತೋಷ, ನೆಮ್ಮದಿ ಅವು ಹೆಚ್ಚಾದಾಗ ಸ್ವಾಭಾವಿಕವಾಗಿ ಇಮ್ಮಡಿಯಾಗಬೇಕಿತ್ತು. ಆದರೆ ಲೋಕದ ನಡೆ ಹಾಗೆ ಕಂಡುಬರುತ್ತಿಲ್ಲ.
ನಿರಂತರ ನಾವು ಸುಖದಿಂದಿರಬೇಕಾದರೆ ನಮ್ಮ ಜೀವನ ಹೇಗಿರಬೇಕು ಎಂದು ಆಲೋಚಿಸುವುದು ಅತ್ಯಂತ ಪ್ರಸ್ತುತವಾಗಿದೆ. ಗುರು ಶ್ರೀರಂಗರು ಅಪ್ಪಣೆಕೊಡಿಸಿದಂತೆ, ಭಾರತೀಯ ಪರಂಪರೆಯಲ್ಲಿ ಸುಖವನ್ನು, ನೆಮ್ಮದಿಯನ್ನು ಅರಸಿ ಅದರ ನೆಲೆಯನ್ನು ಕಂಡುಕೊಂಡ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈ ದೇಶದ ಜ್ಞಾನಿಗಳು ಸುಖವನ್ನು ಹೊರಬುದ್ಧಿಗೆ ಎಟುಕುವ ವಿಸ್ತಾರವಾದ ಪ್ರಪಂಚದಲ್ಲಾಗಲೀ, ಅಲ್ಲಿನ ವಿಧವಿಧ ವಸ್ತು ವಿಷಯಗಳಲ್ಲಾಗಲೀ ಹುಡುಕುವ ಪ್ರಯತ್ನ ಮಾಡಲಿಲ್ಲ. ಬದಲಿಗೆ ತಮ್ಮನ್ನೇ ತಾವು ಅಧ್ಯಯನ ನಡೆಸಿ ಮಾನವನ ಸುಖದ ಸ್ರೋತಸ್ಸು ಅವನ ಅಂತರಂಗದಲ್ಲೇ ಇರುವುದನ್ನು ತಮ್ಮ ತಪಸ್ಯೆಯಿಂದ ಕಂಡುಕೊಂಡರು.ಅವರ ಪ್ರಯಾಣವೆಲ್ಲ ಬುದ್ಧಿಗೂ ಚೈತನ್ಯವನ್ನು ಕೊಡುತ್ತಿರುವ ನಮ್ಮೊಳಗೇ ಬೆಳಗುವ ಬೆಳಕಿನ ಕಡೆಗೆ ಸಾಗಿತ್ತು.ಅಲ್ಲಿ ಅಂತಹ ನೆಮ್ಮದಿಯ ನೆಲೆದಾಣವಿರುವುದನ್ನೂ ಅದರ ಆನಂದದ ಎದುರು ವಿಶ್ವದ ಉಳಿದೆಲ್ಲ ಆನಂದ ಸುಖಗಳು ತೃಣ ಸಮಾನವೆಂದೂ ತಮ್ಮ ಅನುಭವದಿಂದ ನಿಷ್ಕರ್ಷೆಗೆ ಬಂದರು.
ನಿಸರ್ಗದಲ್ಲಿ ಉನ್ನತವಾದ ಗುರಿಯೊಂದು ನಿಶ್ಚಯವಾದರೆ ಉಳಿದುದೆಲ್ಲ ಆ ಗುರಿಗೆ ಅನುಗುಣವಾಗಿ ನಡೆಯುತ್ತದೆ. ನಮಗೆ ನಮ್ಮ ಜೀವನ ನಿರ್ವಹಣೆಗೆ ಬೇಕಾದ ಹಣ ಸಂಪಾದನೆ ಮಾಡಲು ಬೆಳಿಗ್ಗೆ ೭.೩೦ಕ್ಕೇ ಕೆಲಸಕ್ಕೆ ಹೋಗುವುದು ಅನಿವಾರ್ಯವಾದರೆ ನಮ್ಮ ನಿದ್ರೆ, ತಿಂಡಿ,  ಸ್ನಾನ, ಇತ್ಯಾದಿ ಎಲ್ಲವನ್ನೂ ಅದಕ್ಕೆ ಸರಿಯಾಗಿ ನಾವು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಹಾಗೆಯೇ ನಮ್ಮ ದೇಶದ ಜ್ಞಾನಿಗಳು ಜೀವನದ ಪರಮ ಸುಖವಾದ ಅತ್ಮಾನುಭವವನ್ನೂ ಹೊಂದಿ, ಲೋಕಜೀವನದಲ್ಲೂ ಸುಖ, ಶಾಂತಿ, ಸಮೃದ್ಧಿಗಳಿಂದ ಬಾಳಲು ಅನುಗುಣವಾದ  ಜೀವನ ವಿಧಾನವನ್ನು ರೂಪಿಸಿದರು. ಅವರು ಭೌತಿಕ ಜೀವನದಲ್ಲಿ ಬರುವ ಸಮಸ್ಯೆಗಳನ್ನೆಲ್ಲ ಗೌಣವಾಗಿ ಕಂಡು ಆ ಉನ್ನತವಾದ ಆ ಗುರಿಗಾಗಿ ಎಲ್ಲವೂ focus ಆಗುವಂತೆ ಬಾಳಿದರು.
ಮಾನವನ ಶರೀರ ರಚನೆಯಲ್ಲಿ ಅಂತಹ ಸುಖವನ್ನು ಅನುಭವಿಸುವ ಅನುಕೂಲತೆಗಳು ಇರುವುದನ್ನು ಗಮನಿಸಿ ಯಾವ ಬಗೆಯಲ್ಲಿ ನಮ್ಮ ನಿತ್ಯಜೀವನವನ್ನು ಇಟ್ಟುಕೊಂಡರೆ ಒಳಗೆ ಬೆಳಗುವ ಆ ಆನಂದವನ್ನೂ ಅನುಭವಿಸ ಬಹುದು ಹಾಗೂ ಹೊರಗಿನ ಇಂದ್ರಿಯ ಸುಖವನ್ನೂ ಅನುಭವಿಸಬಹುದು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆಸಿ ಅಂತಹ ಜೀವನ ವಿಧಾನವನ್ನು ಜೀವಲೋಕದ ಮೇಲಿನ ಕರುಣೆಯಿಂದ ದಯಪಾಲಿಸಿದ್ದಾರೆ.
ಆ ಜೀವನ ವಿಧಾನದಲ್ಲಿ ನಮ್ಮ ನಿತ್ಯಜೀವನದ, ಸ್ನಾನ, ಊಟ, ಮನೋರಂಜನೆ, ವೃತ್ತಿ ಎಲ್ಲೆಡೆಯಲ್ಲೂ ಆ ಒಳ ಸುಖದ ಛಾಪು ಮರೆಯಾಗದಂತೆ ಹಾಸು-ಹೊಕ್ಕಾಗಿ ಹೆಣೆದರು. ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಪ್ರಾತರ್ವಿಧಿಗಳನ್ನೆಲ್ಲ ಮುಗಿಸಿ ನಮ್ಮ ಜೀವನ ಮೂಲನಾದ ಭಗವಂತನ ಧ್ಯಾನ, ಅದರ ತಂಪಾದ ನೆನಪಿನಿಂದ ಸ್ನಾನ, ದೇವರ ಪೂಜೆ, ನಾವು ತೆಗೆದುಕೊಳ್ಳುವ ಆಹಾರವನ್ನು ಅದು ಯಾರ ಕೃಪೆಯಿಂದ ಬಂದಿದೆಯೋ ಅಂತಹ ಮೂಲ ನೆಲೆಗೆ ಸಮರ್ಪಿಸಿ ಪ್ರಸಾದ ರೂಪವಾಗಿ ಅದರ ಸೇವನೆ, ಎಲ್ಲ ಜೀವಿಗಳಲ್ಲೂ ಅವನೇ ಪ್ರಕಾಶಿಸುತ್ತಿರುವುದರಿಂದ ಎಲ್ಲರನ್ನೂ ಸ್ನೇಹ, ವಿಶ್ವಾಸಗಳಿಂದ ನೋಡುವ ಮನೋಭಾವ, ನಾವು ಸ್ವೀಕರಿಸುವ ಆಹಾರಗಳು ನಮ್ಮ ಮನಸ್ಸನ್ನು ಕಲುಷಿತಗೊಳಿಸದೆ ನಮ್ಮನ್ನು ಸಾತ್ವಿಕವಾಗಿ ಇಟ್ಟಿರುವಂತಹ ಆಹಾರ ವ್ಯವಸ್ಥೆ, ನಾವು ಕೇಳುವ ಶಬ್ದ, ನೋಡುವ ರೂಪ, ಸ್ಪರ್ಶಿಸುವ ವಸ್ತುಗಳು,ನಮ್ಮ ರುಚಿ, ನಮ್ಮ ವಾಸನೆ ಎಲ್ಲವೂ ಈ ಒಳ ಹೊರ ಜೀವನಕ್ಕೆ ಅನುಗುಣವಾಗಿರುವಂತೆ ಪರಿಷ್ಕರಿಸಿ ತೆಗೆದುಕೊಳ್ಳುವಂತೆ  ಭಾರತೀಯ ಜೀವನಪದ್ಧತಿಗಳು ರೂಪುಗೊಂಡಿವೆ. ಇಂತಹ ಪರಿಷ್ಕೃತವಾದ ಜೀವನ ನಮ್ಮದಾದಲ್ಲಿ ನಮಗೆ ಜೀವನದ ಯಾವ ಸಮಸ್ಯೆಗಳೂ ಭಾರಿಯಾಗಿ ಕಾಣದೇ ತಂಪಾದ ಮನಸ್ಸಿನಿಂದ ಅವುಗಳನ್ನು ನಿಭಾಯಿಸುವ ಸಾಮರ್ಥ್ಯ  ಬರುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಜೀವನದ ಗುರಿ ಸತ್ಯದ ಸಾಕ್ಷಾತ್ಕಾರ. ಅದಕ್ಕೆ ಬೇಕಾದ ನಡೆ ಇದ್ದಾಗ ಉಳಿದೆಲ್ಲವೂ ಎಷ್ಟು ಕೂಡಿಬಂತೋ ಅಷ್ಟು ಎಂಬ ಹೃದಯ ವೈಶಾಲ್ಯ ತಾನಾಗಿಯೇ ಬರುತ್ತದೆ.

ಇಂತಹ ಜ್ಞಾನಿಗಳ ಜೀವನ ವ್ಯವಸ್ಥೆ ನಮಗೆಲ್ಲ ಆದರ್ಶವಾಗುವುದಾದಲ್ಲಿ ಇಂದಿನ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಿ ಜಯಶಾಲಿಗಳಾಗಿ ಒಂದು ಸರ್ವಾಂಗ ಸುಂದರವಾದ ಸಮಾಜವನ್ನು ಕಟ್ಟುವುದರಲ್ಲಿ ನಮ್ಮ ತರುಣರೆಲ್ಲ ಯಶಸ್ವಿಯಾದಾರು.ಅಂತಹ ವೈಭವದ ಭಾರತ ಮತ್ತೆ ಮೆರೆಯುವಂತಾಗಲಿ ಎಂದು ಹಾರೈಸೋಣ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

ಭಾರತದ ಆತ್ಮ : ಅಧ್ಯಾತ್ಮ (Bharatada Atma: Adhyatma)


ಶೈಕ್ಷಣಿಕ ನಿರ್ದೇಶಕಸ್ವದೇಶೀ ಇಂಡಾಲಜಿ
ಸದಸ್ಯರು, Indian Institute of Advanced Studies, Shimla

ಜೀವನವು ಒಂದು ಪ್ರಯಾಣ ಎಂಬ ರೂಪಕವನ್ನು ಹಲವರು ಹೇಳಿದ್ದಾರಲ್ಲವೆ? ನಾವೆಲ್ಲ ಎಲ್ಲಿಂದ ಬಂದೆವು? - ಎಂಬುದು ಗೊತ್ತಿಲ್ಲ. ನಾವೆಲ್ಲಿಗೆ ಹೋಗುತ್ತಿದ್ದೇವೆ? - ಎಂಬುದೂ ಗೊತ್ತಿಲ್ಲ. ಈಗಂತೂ ಇಲ್ಲಿ ಇದ್ದೇವೆಂಬುದು ಗೊತ್ತು. "ನಾನು ಯಾರು?" ಎಂಬ ಪ್ರಶ್ನೆಗೇ ಉತ್ತರವು ಗೊತ್ತಿಲ್ಲ. ಎಂದೇ ಪ್ರಸಿದ್ಧ ಸ್ತೋತ್ರವೊಂದು ಕೇಳುತ್ತದೆ: ನೀನು ಯಾರು? ನಾನು ಯಾರು? ಬಂದದ್ದು ಎಲ್ಲಿಂದ? ನನ್ನ ತಾಯಿ ಯಾರು? ತಂದೆ ಯಾರು? - ಇದನ್ನೆಲ್ಲ ಪರಿಭಾವಿಸಬೇಕಯ್ಯಾ, ಎನ್ನುತ್ತದೆ ಮಾತು.

"ಕಸ್ತ್ವಂ? ಕೋಽಹಂ? ಕುತ ಆಯಾತಃ?
ಕಾ ಮೇ ಜನನೀ? ಕೋ ಮೇ ತಾತಃ? ..."

ಹಾಗೆಯೇ ಗೀತೆಯಲ್ಲಿ ಸಹ, "ಪ್ರಾಣಿಗಳ ಆದಿಯು ಅವ್ಯಕ್ತ; ಪ್ರಾಣಿಗಳ ಮಧ್ಯವು ವ್ಯಕ್ತ; ಪ್ರಾಣಿಗಳ ನಿಧನವೂ ಅವ್ಯಕ್ತ...!" - ಎಂದು ಹೇಳಲಾಗಿದೆ

"ಅವ್ಯಕ್ತಾದೀನಿ ಭೂತಾನಿ ವ್ಯಕ್ತ-ಮಧ್ಯಾನಿ ಭಾರತ| ಅವ್ಯಕ್ತ ನಿಧನಾನ್ಯೇವ" ಎಂದು.

ಪ್ರಯಾಣವು ಸಾಗಬೇಕಾದರೆ ಕಾಲ್ನಡಿಗೆಯಿಂದ ಆಗಬಹುದು. ಎತ್ತಿನ ಬಂಡಿಯು ಹಳ್ಳಿಗಳಲ್ಲಾದರೆ, ಪಟ್ಟಣ-ನಗರಗಳಲ್ಲಿ ಕುದುರೆಯೋ ಕುದುರೆ ಗಾಡಿಯೋ ಆಗುತ್ತಿತ್ತಷ್ಟೆ. ಎಂದೇ ಅವೇ ಪ್ರಚುರವಾಗಿದ್ದ ಕಾಲದಲ್ಲಿ, ರಥದಲ್ಲಿ ಸಾಗುವ ಲೆಕ್ಕವನ್ನಿಟ್ಟುಕೊಂಡು ಹೇಳುವಿಕೆಯೆಂಬುದು ಸಹಜವಾದದ್ದು. ಉಪನಿಷತ್ತಿನಲ್ಲಿ ರಥದ ಉದಾಹರಣೆಯೇ ಮೂಡಿಬಂದಿದೆ.

ಯಾವುದು ರಥ? ರಥದಲ್ಲಿ ಕುಳಿತು ನಿರ್ದಿಷ್ಟಲಕ್ಷ್ಯಕ್ಕೆ ಪ್ರಯಾಣ ಮಾಡುವವ, ಅಂದರೆ ಯಜಮಾನ, ಯಾರು? ಅರ್ಥಾತ್, ರಥಿ ಯಾರು? ರಥಿಗೊಬ್ಬ ಸಾರಥಿ ಯಾರು? ಸಾರಥಿಯು ತಾನೆ ರಥವೆತ್ತ ಸಾಗಬೇಕಾಗಿದೆಯೆಂದು ಖಚಿತಮಾಡಿಕೊಂಡಿರುವವನು? ಆತನ ಕೈಯಲ್ಲಿ ಲಗಾಮುಗಳಿರುತ್ತವೆ. ಲಗಾಮಿನ ಹಿಡಿತ-ಸೆಳೆತ-ಸಡಿಲಿಕೆಗಳಿಂದಲ್ಲವೆ ರಥವನ್ನು ಓಡಿಸುವುದು? ಲಗಾಮು ಯಾವುದು? ಲಗಾಮಿನಿಂದ ಆತನು ಕುದುರೆಯ ಅಥವಾ ಕುದುರೆಗಳ ಮೇಲೆ ಹತೋಟಿಯನ್ನಿಟ್ಟುಕೊಂಡಿರುವವನಲ್ಲವೆ? ಹಾಗಾದರೆ ಕುದುರೆಗಳು ಯಾವುವು? ಇಷ್ಟೆಲ್ಲ ಇದ್ದರೂ ಪ್ರಯಾಣದ ಕೊನೆ, ಅಂದರೆ ನಿಲ್ದಾಣವಾವುದು? ಅರ್ಥಾತ್ ಲಕ್ಷ್ಯವಾವುದು? - ಇಷ್ಟೆಲ್ಲ ಪ್ರಶ್ನೆಗಳು ಕಣ್ಣಮುಂದೆ ಬಂದು ನಿಲ್ಲುತ್ತವಲ್ಲವೆ?

ಇಷ್ಟೂ ಪ್ರಶ್ನೆಗಳಿಗೆ ಉತ್ತರವನ್ನು ಅತ್ಯಂತ ಸಂಕ್ಷಿಪ್ತವಾಗಿ ಉಪನಿಷತ್ತಿನಲ್ಲಿ ಕೊಡಲಾಗಿದೆ. ಕಠೋಪನಿಷತ್ತು ಹೀಗೆ ಹೇಳಿದೆ: "ನಾನು (ಅಥವಾ  ಆತ್ಮ) - ಎನ್ನುವುದನ್ನೇ ರಥಿಯೆಂಬುದಾಗಿ ತಿಳಿದುಕೋ. ಶರೀರವೇ ರಥ. ಬುದ್ಧಿಯೇ ಸಾರಥಿ. ಮನಸ್ಸೇ ಲಗಾಮು. ಇಂದ್ರಿಯಗಳೇ ಕುದುರೆಗಳು."

"ಯಾವನಲ್ಲಿ ವಿಜ್ಞಾನವಿಲ್ಲವೋ, ಯಾವನ ಮನಸ್ಸು ಯುಕ್ತವಾಗಿಲ್ಲವೋ ಅವನಿಗೆ ಇಂದ್ರಿಯಗಳು ವಶವಾಗಿರವು - ಸಾರಥಿಗೆ ಕೆಟ್ಟ ಕುದುರೆಗಳಿದ್ದಂತೆ."

"ಯಾವನಲ್ಲಿ ವಿಜ್ಞಾನವುಂಟೋ, ಯಾವನ ಮನಸ್ಸು ಯುಕ್ತವಾಗಿರುವುದೋ ಅವನಿಗೆ ಇಂದ್ರಿಯಗಳು ವಶವಾಗಿರುವುವು - ಸಾರಥಿಗೆ ಒಳ್ಳೆಯ ಕುದುರೆಗಳಿದ್ದಂತೆ."

ಏನು ವಿಜ್ಞಾನವೆಂದರೆ? ಉಪನಿಷತ್ತಿನಲ್ಲಿ ಬಂದಿರುವ "ವಿಜ್ಞಾನ"ಕ್ಕೆ ವಿಶೇಷವಾದ ಜ್ಞಾನ, ವಿಶೇಷವಾದ ಅರಿವು - ಎಂದರ್ಥ. ಹಾಗೆಯೇ ಮನಸ್ಸು ಯುಕ್ತವಾಗಿರುವುದು ಎಂದರೇನು? ಮನಸ್ಸಿಗೆ ಯೋಗವು ಬಂದಿದ್ದಲ್ಲಿ ಅದು "ಯುಕ್ತ"ವಾದ ಮನಸ್ಸು. ಯಾವ ಯೋಗ? ಯೋಗವೆಂದರೆ ಸೇರ್ಪಡೆ. ತಾನೇನು ಮಾಡಬೇಕೋ ಅದಕ್ಕೇ ಮನಸ್ಸು ಹೊಂದಿಕೊಂಡಿದ್ದರೆ, ಅದರಲ್ಲೇ ಸೇರಿಕೊಂಡಿದ್ದರೆ, ಅದು ಯುಕ್ತವಾದ ಮನಸ್ಸು. "ಮನಸ್ಸು ಯುಕ್ತವಾಗಿಲ್ಲ"ವೆಂದರೆ ಮನಸ್ಸಿನಲ್ಲಿ ಸೇರಿಕೊಂಡುಹೋಗಿರುವಿಕೆಯು ಬಂದಿಲ್ಲವೆಂದೇ. ಅಲ್ಲಿಗೆ ವಿಶೇಷವಾದ ಅರಿವೂ ಯುಕ್ತವಾದ ಮನಸ್ಸೂ ಇದೆಯೆಂದರೆ, ಸಾರಥಿಗೆ ಒಳ್ಳೆಯ ಕುದುರೆಗಳಿವೆ - ಎಂದರ್ಥ. ಇಲ್ಲವೋ ಕುದುರೆಗಳು ಒಳ್ಳೆಯವಲ್ಲ - ಎಂದೇ.

ವಿಜ್ಞಾನವಿಲ್ಲದಿದ್ದರೆ ಏನು ಪರಿಣಾಮವಾಗುವುದು? ಅದು ಇದ್ದರೆ ಏನು? - ಎಂಬ ಪ್ರಶ್ನೆಗಳು ಬರುವುವಲ್ಲವೆ? ಮೊದಲು ಅರಿವು ಸರಿಯಿರಬೇಕು. ಇಲ್ಲವೋ ಮನಸ್ಸು ಯುಕ್ತವಾಗಿರದು. ಮನಸ್ಸೇ ಯುಕ್ತವಾಗಿಲ್ಲ - ಎಂದರೆ, ಇನ್ನು ಕುದುರೆಗಳ ಬಗ್ಗೆ ಹೇಳುವುದೇನು? ಅವು ಸದಶ್ವ (ಒಳ್ಳೆಯ ಕುದುರೆ)ಗಳಲ್ಲ, ದುಷ್ಟಾಶ್ವ(ಕೆಟ್ಟ ಕುದುರೆ)ಗಳೇ ಸರಿ!

ಕುದುರೆಗಳು ಹೇಗಿದ್ದರೇನು? - ಎಂದು ಕೇಳಬಹುದಲ್ಲವೆ? ಕುದುರೆಗಳು ಒಳ್ಳೆಯವಾಗಿದ್ದರೆ ಗುರಿ ಮುಟ್ಟಬಹುದು. ದುಷ್ಟಾಶ್ವಗಳಾದರೆ ಲಕ್ಷ್ಯವನ್ನು ತಲುಪಲಾದೀತೇ?

ಹಾಗಿದ್ದರೆ ಜೀವನವೆಂಬ ಪ್ರಯಾಣಕ್ಕೆ ಗುರಿಯಾವುದು? ಅದನ್ನು ಉಪನಿಷತ್ತು, "ತದ್ ವಿಷ್ಣೋಃ ಪರಮಂ ಪದಮ್" "ವಿಷ್ಣುವಿನ ಪರಮಸ್ಥಾನ" ಎನ್ನುತ್ತದೆ. ಏಕೆ ಬೇಕು ಗುರಿ? - ಎಂಬ ಪ್ರಶ್ನೆಗೂ ಉತ್ತರವು ಅಲ್ಲೇ ಇದೆ: ಅದು ಮರು ಹುಟ್ಟಿಲ್ಲದ ಎಡೆ

ಒಳ್ಳೆಯ ಕುದುರೆಗಳಾದರೆ, ಅರ್ಥಾತ್ ನಮ್ಮ ಇಂದ್ರಿಯಗಳು ಸತ್ಪ್ರವೃತ್ತಿಯನ್ನು ಹೊಂದಿದ್ದರೆ, ಪರಮಪದವನ್ನು ತಲುಪಬಹುದು. ದುಷ್ಟವಾದ ಕುದುರೆಗಳಾದರೆ ಪರಿಣಾಮವೇನು? ತತ್ಪರಿಣಾಮವೇ ಸಂಸಾರ.

ಸಂಸಾರವೆಂದರೇನು? ಸಂಸಾರವೆಂದರೆ ಸಂಸರಣ. ಸಂಸರಣವೆಂದರೆ ಸುತ್ತಿ ಸುತ್ತಿ ಬರುವುದು, ಬರುತ್ತಿರುವುದು. ಇದರಿಂದ ಏನು ನಷ್ಟ? - ಎಂದೂ ಕೇಳಬಹುದು. ದೆಹಲಿಯಲ್ಲಿ ಕನ್ನಾಟ್ ಸರ್ಕಸ್ (Connaught Circus) ಎಂದಿದೆಯಲ್ಲವೆ? ಅದು ವೃತ್ತಾಕಾರವಾಗಿದೆ. (Circus ಎಂದರೆ ಸುತ್ತೂ ಹೌದು). ಬೃಹದ್ವೃತ್ತ. ರಸ್ತೆಯಲ್ಲಿ ಸಾಗುತ್ತಿದ್ದರೆ ಮುಂದೆ ಮುಂದೆ ಹೋಗುತ್ತಲೇ ಇರುತ್ತೇವೆ. ಪ್ರ-ಗತಿಯಾಗುತ್ತಿದೆ ಎಂದೇ ತೋರುತ್ತದೆ. "ನಾವು ಪ್ರಗತಿಪರರು" - ಎಂದೇ ಎಂದುಕೊಳ್ಳು ತ್ತಿರುತ್ತೇವೆ. ಆದರೆ ಆಗುತ್ತಿರುವುದೇನು? ಮತ್ತೆ ಮತ್ತೆ ಸುತ್ತು! ಬಂದಲ್ಲಿಗೇ ಬರುತ್ತಿರು, ಹೋದಲ್ಲಿಗೇ ಸಾಗುತ್ತಿರು! ವಿಶೇಷವಾದ ಅರಿವಿಲ್ಲದಿದ್ದರೆ ಬರೀ ಚಕ್ರಭ್ರಮಣವೆಂದೇ ಗೊತ್ತಾಗದು; ಆಹಾ ಎಷ್ಟು ವೇಗವಾಗಿ ಹೋಗುತ್ತಿದ್ದೇನೆ! ಎಲ್ಲರನ್ನೂ ಮೀರಿಸುತ್ತಿದ್ದೇನೆ! - ಎಂದೇ ತೋರುತ್ತಿರುವುದು! ನೆಲೆಗಂಡೆವೆ? - ಎಂಬ ಪ್ರಶ್ನೆಯೇ ಬರದಿದ್ದರೆ ಲಾಭವೇನು?

ನಾವಿರುವುದೇ ಸಂಸಾರಸ್ಥಿತಿಯಲ್ಲಿ; ಲಕ್ಷ್ಯವೇ ಪರಮಪದ - ಅದುವೇ ದಾರಿಯ ಕೊನೆ, ಜೀವನದ ನಿಲ್ದಾಣ, ನೆಲೆ.

ಉಪನಿಷತ್ತು ಕೊಟ್ಟಿರುವ ರೂಪಕವು ನಾವೇನು, ನಮ್ಮ ಪ್ರಸಕ್ತ ಸ್ಥಿತಿಯೇನು, ನಮ್ಮ ಗುರಿಯೇನು - ಎನ್ನುವುದನ್ನು ತಿಳಿಸುವುದು. ರಥ-ರಥಿ, ಸಾರಥಿ-ಲಗಾಮು, ಕುದುರೆ-ದಾರಿ, ಹಾಗೂ ನಿಲ್ದಾಣ-ಭ್ರಮಣಗಳನ್ನು ಸೊಗಸಾಗಿ ತೋರಿಸಿಕೊಟ್ಟಿದೆ.

ಉದಾಹರಣವೆಂದರೆ ಮೇಲಕ್ಕೆ(ಉತ್) ಎತ್ತುವುದು(ಆಹರಣ). ಅಜ್ಞಾನವೆಂಬ ಹಳ್ಳದಿಂದ ಜ್ಞಾನವೆಂಬ ಉನ್ನತಸ್ಥಾನಕ್ಕೆ ಎತ್ತುವುದೇ ಉದಾಹರಣೆ. ಮನಸ್ಸಿಗೆ ನಾಟುವ ಉದಾಹರಣೆ-ರೂಪಕಗಳ ಮೂಲಕ ನಮ್ಮನ್ನು ಉನ್ನತಸ್ಥಿತಿಗೆ ಒಯ್ದು ಸತ್ಯವನ್ನು ತೋರಿಸಿಕೊಡುವುವು, ನಮ್ಮ ಉಪನಿಷತ್ತುಗಳು.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.