Tuesday, June 11, 2019

ಮೇಲ್ಬೇರು, ಕೆಳಕೊಂಬೆ-ಈ ವೃಕ್ಷವಾದರೂ ಯಾವುದು? (Melberu, kelakombe. I vrukshavadaru yavudu?)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಸಾಮಾನ್ಯವಾಗಿ  ಲೋಕದಲ್ಲಿ ನಾವು ನೋಡುವ ವೃಕ್ಷಗಳ ಬೇರು ಕೆಳಗೆ ಭೂಮಿಯ ಆಳದಲ್ಲಿರುತ್ತವೆ. ಕೊಂಬೆಗಳು ಮೇಲೆಲ್ಲಾ ಹರಡಿರುತ್ತವೆ. ಆದರೆ ಶ್ರೀ ಕೃಷ್ಣನು ಗೀತೆಯಲ್ಲಿ-
“ಊರ್ಧ್ವಮೂಲಮಧಃಶ್ಶಾಖಾ ಅಶ್ವತ್ಥಮ್ ಪ್ರಾಹುರವ್ಯಯಂ| ಛಂದಾಂಸಿ ಯಸ್ಯ ಪರ್ಣಾನಿ, ಯಸ್ತಂ ವೇದ ಸ ವೇದವಿತ್||- ಮೇಲೆ ಬೇರು ಕೆಳಗೆ ಕೊಂಬೆಗಳನ್ನುಳ್ಳ ಅಶ್ವತ್ಥವೃಕ್ಷವಿದೆ. ಅದನ್ನು ಆಮೂಲಾಗ್ರವಾಗಿ ಯಾರು ತಿಳಿಯುತ್ತಾರೋ ಅವನನ್ನೇ “ವೇದವಿತ್”- ವೇದವನ್ನು ತಿಳಿದವನು. ಅಥವಾ ಸತ್ಯವನ್ನು ತಿಳಿದವನು ಎನ್ನಲಾಗುತ್ತದೆ. ಎಂದಿದ್ದಾನೆ.

ಒಮ್ಮೆ ಶ್ರೀರಂಗ ಮಹಾಗುರುಗಳು ಅವರ ಶಿಷ್ಯರ ಸಮ್ಮುಖದಲ್ಲಿ ಇಂತಹ ಒಂದು ವೃಕ್ಷವನ್ನು ನೀವೆಲ್ಲಾದರೂ ನೋಡಿದ್ದೀರಾ? ಎಂದು ಕೇಳಿದರು. ಅಲ್ಲಿದ್ದವರೆಲ್ಲ ಎಷ್ಟು ಪ್ರಯತ್ನಿಸಿದರೂ ನಿಸರ್ಗದಲ್ಲಿ ಅಂತಹ ಒಂದು ವೃಕ್ಷವನ್ನು ನೋಡಿದ ನೆನಪಾಗಲಿಲ್ಲ. ಮುಂದುವರೆದು ಅವರು, ಇಲ್ಲೇ ಇವೆಯಪ್ಪಾ ಎಂದರು. ಆಗಲೂ ಗೊತ್ತಾಗದಿದ್ದಾಗ ಅವರು ಹೇಳಿದರು- ಆ ವೃಕ್ಷವನ್ನು ಹೊತ್ತುಕೊಂಡು ನಾವೆಲ್ಲರೂ ಓಡಾಡುತ್ತಿದ್ದೇವಪ್ಪಾ , ನಮ್ಮ ಶರೀರವೇ ಅಂತಹ ವೃಕ್ಷವಾಗಿದೆ ಎಂದು ವಿವರಿಸಿದರು.

ನಮ್ಮ ಮಸ್ತಿಷ್ಕ ಅಂದರೆ –ತಲೆ, ಮೇಲಿದೆ. ಅದುವೇ ಈ ಜೀವನವೃಕ್ಷದ ಬೇರು. ಅದು ಹೇಳಿದಂತೆ ಶಾಖೆಗಳನ್ತಿರುವ ಕೈ ಕಾಲುಗಳು ಕಾರ್ಯ ನಿರ್ವಹಿಸುತ್ತವೆ. ನಾವು ಯಾವ ಕ್ರಿಯೆಯನ್ನು ಮಾಡಬೇಕಾದರೂ ತಲೆ ಹೇಳಿದಂತೆಯೇ ಮಾಡಬೇಕು. ತಲೆ ಇಲ್ಲದಿದ್ದರೆ ಕೈ ಕಾಲುಗಳು ನಿಶ್ಚೇಷ್ಟಿತ. ನಮ್ಮ ನಮ್ಮ ಮಟ್ಟಿಗೆ ನಮ್ಮ ತಲೆಯೇ ನಮಗೆ ದೇವರು. ಅದರ ನಿರ್ದೇಶನದಲ್ಲೇ ನಾವು ಬದುಕುವುದು. ಎಂದೇ ತಲೆಯನ್ನು ಚೆನ್ನಾಗಿಟ್ಟುಕೊಂಡರೆ ಜೀವನ ಚೆನ್ನಾಗುತ್ತದೆ. ಕೆಲವು ವೇಳೆ ಹೊರಗೆ ನಾವು ನೋಡುವ ಕೆಲವು ಮರಗಳಲ್ಲಿ ಮೂಲ ಮರ ಒಂದಾದರೆ ಅದರ ಕೊಂಬೆಯ ಮೇಲೆ ಇನ್ನೊಂದು ಯಾವುದೋ ಬೀಜವು  ಮೂಲ ಮರದ ಶಕ್ತಿಯನ್ನು ತೆಗೆದುಕೊಂಡು ತಾನೇ ಬೆಳೆಯುತ್ತಿರುತ್ತದೆ. ಕೆಳಗೆ ಮಾವಿನ ಬೇರು, ಕಾಂಡ ಎಲ್ಲವೂ. ಮೇಲೆ ಬೇವು ಬೆಳೆಯುತ್ತಿದೆ.  ಇದನ್ನು ಬದನಿಕೆ ಎನ್ನುತ್ತಾರೆ. ಇದು ಸೃಷ್ಟಿಯ ಆಶಯಕ್ಕೆ ವಿರುದ್ಧವಾದ ಬೆಳವಣಿಗೆ. ವ್ಯವಸಾಯಜ್ಞ ಮರದ ಬೆಳವಣಿಗೆಯನ್ನು ಆಗಾಗ ಗಮನಿಸುತ್ತಾ ಅದಕ್ಕೆ ಸರಿಯಾದ ಕೃಷಿ ಮಾಡುತ್ತಾ ಇದ್ದರೆ ಈ ಬಗೆಯ ಬದನಿಕೆಯನ್ನು ಬೆಳೆಯದಂತೆ ಮರವನ್ನು ರಕ್ಷಿಸಬಹುದು. ವ್ಯವಸಾಯದ ಬಗ್ಗೆ ಪರಿಚಯವಿಲ್ಲದೇ ಇದ್ದರೆ ಬದನಿಕೆಯ ಫಲವನ್ನೇ ಮಾವಿನ ಹಣ್ಣೆಂದು ಭ್ರಮಿಸುವಂತಾಗುತ್ತದೆ. ಹಾಗೆಯೇ ನಮ್ಮ ಜೀವನವೃಕ್ಷಗಳಲ್ಲಿಯೂ  ಸಹಜವಾಗಿ ಭಗವಂತ ಇಟ್ಟ ನಮ್ಮ ತಲೆಯ ರೂಪದ ಬೀಜ, ಬೇರು ಒಂದಾದರೆ ಮುಂದೆ ಸರಿಯಾದ ಕೃಷಿ ಮಾಡದೇ ಬೆಳೆದ ಬದನಿಕೆಯಂತಹ ವೃಕ್ಷವೇ ಬೇರೆಯಾಗಿದೆ. ನಮ್ಮ ಸಹಜವಾದ ಆನಂದ ಶಾಂತಿ ಸಮೃದ್ಧಿಗಳ ಪರಿಚಯವೇ ನಷ್ಟವಾಗಿ ಬದನಿಕೆಯ ಬದುಕಾಗಿಬಿಟ್ಟಿದೆ ನಮ್ಮದು. ಮಾತ್ರವಲ್ಲ ಈ ಬದನಿಕೆಯನ್ನೇ ಸಹಜ ಎಂದು ತಿಳಿಯುವಷ್ಟು ಭ್ರಮೆಗೆ ಒಳಗಾಗಿದ್ದೇವೆ. ಬೇರಿಗೆ ಒಳ್ಳೆಯ ಸಂಸ್ಕಾರಗಳ ಕೃಷಿ ನಡೆದರೆ ಈ ಜೀವನವೃಕ್ಷದಲ್ಲೂ ಪರಮ ಫಲವನ್ನು ಪಡೆಯಬಹುದು ಎಂಬುದು ಈ ದೇಶದ ಮಹರ್ಷಿಗಳ ಮಾತು. 

ಇಲ್ಲಿ ಬೆಳೆದುಬಂದ ಸಂಸ್ಕೃತಿ,ನಾಗರೀಕತೆಗಳೆಲ್ಲವೂ ಮಾನವನ ಮೇಲ್ಬೇರಾದ  ಮಸ್ತಿಷ್ಕವನ್ನು  ಸಹಜವಾಗಿ ಬೆಳೆಸುವ, ಅದಕ್ಕಾಗಿ ಮಾಡುವ ಕೃಷಿಯಾಗಿಯೇ ಬೆಳೆದುಬಂದಿವೆ ಎಂಬುದನ್ನು ಮರೆಯದಿರೋಣ. ಜೀವನ ವ್ಯವಸಾಯವನ್ನು ಚೆನ್ನಾಗಿ ಬಲ್ಲ ಭಾರತೀಯ ಮಹರ್ಷಿಗಳು ಇಲ್ಲಿನ ಸಂಸ್ಕಾರಗಳು,ಪೂಜೆ ಪುರಸ್ಕಾರಗಳು,ಹೋಮ ಹವನಗಳು,ತೀರ್ಥಕ್ಷೇತ್ರಗಳು,ಗುಡಿ-ಗೋಪುರಗಳು ಎಲ್ಲವನ್ನೂ ನಮ್ಮ ಜೀವನ ವೃಕ್ಷದ ಬೇರಿಗೆ ನೀರೆರೆಯುವ, ಅದನ್ನು ಐಹಿಕ ಪಾರಮಾರ್ಥಿಕ ಎರಡನ್ನೂ ಆನಂದವಾಗಿ ಅನುಭವಿಸುವ ಮಹಾ ಜೀವನ ವೃಕ್ಷವಾಗಿ ಬೆಳೆಸುವ ಸಾಧನಗಳನ್ನಾಗಿಯೇ ತಂದಿದ್ದಾರೆ. ಅವರ ಜೀವಲೋಕದ ಮೇಲಿನ ಅಪಾರವಾದ ಕರುಣೆ ಅವಿಸ್ಮರಣೀಯ.

ವೇದಗಳು ನಮ್ಮ ಶರೀರ-ಪಿಂಡಾಂಡ, ಮತ್ತು ಹೊರಗಿನ ಬ್ರಹ್ಮಾಂಡ ಇವುಗಳ ಸ್ವರೂಪವನ್ನು ಅಂತರಂಗದ ಅನುಭವದಿಂದ ತಿಳಿಸುವುವಾಗಿದೆ. ಅಂತಹ ಸ್ವರೂಪವನ್ನು ಕಾಪಿಟ್ಟುಕೊಂಡಾಗಲೇ  ನಮ್ಮ ಒಳ ಹೊರ ಜೀವನಗಳು ಸಮೃದ್ಧ. ಅದುವೇ ಈ ಜೀವನ ವೃಕ್ಷದ ಪರಮಫಲ.ಇಂತಹ ಜೀವನವೃಕ್ಷವಾದ  ನಮ್ಮೀ ಶರೀರವನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡವನೇ ನಿಜವಾದ ವೇದವಿತ್ ಎಂಬ ಭಗವಂತನ ಮಾತು ಎಷ್ಟು ಉದ್ಬೋಧಕವಾಗಿದೆಯಲ್ಲವೇ?  


ಸೂಚನೆ:  11/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.