Sunday, May 5, 2019

ಶಂಖನಾದ (Shankhanada)

ಲೇಖಕರು : ಡಾ. ಎಂ. ಜಿ. ಪ್ರಸಾದ್
  ನಿವೃತ್ತ ಪ್ರಾಧ್ಯಾಪಕರು,
ಸ್ಟೀವನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,
ಅಮೇರಿಕಾ


ಪೀಠಿಕೆ:

ಶಂಖವನ್ನು ಊದುವುದರಿಂದ ಹೊರಬರುವ ನಾದದಲ್ಲಿ ಏನೋ ವೈಶಿಷ್ಟ್ಯ ಇರಬೇಕೆಂದು ತೋರುತ್ತದೆ. ಅದಕ್ಕೇ ವಿಶ್ವದ ಅನೇಕ ಸಂಸ್ಕೃತಿಗಳಲ್ಲಿ ಜನರು ಶಂಖನಾದವನ್ನು ವಿವಿಧ ಕಾರಣಗಳಿಗೆ ಉಪಯೋಗಿಸುತ್ತಾರೆ. ನ್ಯೂ ಗಿನಿ ಸಂಸ್ಕೃತಿಯಲ್ಲಿ ಶಂಖನಾದದ ಮೂಲಕ ಪರಸ್ಪರ ಸಂದೇಶ ಕಳುಹಿಸುವುದು ಹಾಗು ಮುಖ್ಯವಾದ ಸಮಾರಂಭಗಳ ಆರಂಭ ಸೂಚಿಸುವುದಕ್ಕೆ ಉಪಯೋಗಿಸುವುದುಂಟು. ಮತ್ತೆ ಕೆಲವು ಪ್ರಾಚೀನ ಸಂಸ್ಕೃತಿಯಲ್ಲಿ ಸಾರ್ವಜನಿಕ ಸ್ನಾನಗೃಹಗಳು ತೆರೆದಿವೆ ಎಂಬುದನ್ನು ಸೂಚಿಸುತ್ತಿದ್ದರು. ಪಶ್ಚಿಮ ಬೊಹೆಮಿಯಾದ ಸಂಸ್ಕೃತಿಯಲ್ಲಿ ಅತಿಮಾನುಷ ಶಕ್ತಿಯಿದೆಯೆಂದು ಹಾಗು ಮುಂಬರುವ ಬಿರುಗಾಳಿಯನ್ನು ತಡೆಯುವುದೆಂಬ ನಂಬಿಕೆಯಿಂದ ಶಂಖನಾದ ಮಾಡುತ್ತಿದ್ದರು. ನಮಗೆಲ್ಲಾ ತಿಳಿದಂತೆ ಮಹಾಭಾರತದ ಧರ್ಮಯುದ್ಧದ ಆರಂಭದಲ್ಲಿಯೇ ಶ್ರೀ ಕೃಷ್ಣನೂ ಸೇರಿದಂತೆ ಅನೇಕರು ಶಂಖನಾದ ಮಾಡಿದರು. ಈಗಲೂ ಸಹ ಭಾರತೀಯ ಸಂಸ್ಕೃತಿಯಲ್ಲಿ ಪೂಜೆ, ಉತ್ಸವ, ಮದುವೆ ಮುಂತಾದ ಸಮಾರಂಭಗಳಲ್ಲಿ ಶಂಖನಾದವನ್ನು ಶುಭಾರಂಭಕ್ಕೆ ಉಪಯೋಗಿಸುವುದುಂಟು. ಈ ವರುಷದ ಜನವರಿ ೨೬, ೨೦೧೯ ರಂದು ನಡೆದ ಭಾರತದ ಗಣರಾಜ್ಯೋತ್ಸವದ ಮೆರೆವಣಿಗೆಯಲ್ಲಿ ಕೂಡ ಶಂಖನಾದವನ್ನು ಮಾಡಲಾಯಿತು.


ಶಂಖ ಹಾಗು ಶಂಖನಾದದ ವೈಶಿಷ್ಟ್ಯ:




ಶಂಖಗಳಲ್ಲಿ ಬಲಮುರಿ ಮತ್ತು ಎಡಮುರಿ ಎಂಬ ಎರಡು ರೀತಿ (ಚಿತ್ರ ೧ ನ್ನು ನೋಡಿ).  
ಶಂಖವನ್ನು ಊದುವ ರೀತಿಯಲ್ಲಿ ಇಟ್ಟುಕೊಂಡಾಗ ಶಂಖದ ಕಿವಿಯು ಬಲಗಡೆ ಇದ್ದರೆ ಅದು ಬಲಮುರಿ ಶಂಖ. ಹಾಗೆಯೇ ಶಂಖದ ಕಿವಿಯು ಎಡಗಡೆ ಇದ್ದರೆ ಅದು ಎಡಮುರಿ ಶಂಖ. ಮತ್ತೊಂದು ವಿಶೇಷವೇನೆಂದರೆ ಬಲಮುರಿ ಅಥವಾ ಎಡಮುರಿ ಶಂಖದಿಂದಾಗಲಿ  ಕಿವಿಯನ್ನು ಮುಚ್ಚಿಟ್ಟುಕೊಂಡಾಗ ಸುತ್ತಮುತ್ತಲ ಪರಿಸರಿದಲಿನ್ನ ಶಬ್ದವು ಶಂಖದ ಮೂಲಕ ಕಿವಿಗೆ ಸಮುದ್ರದ ಅಲೆಗಳ ಬಡಿತದ ಶಬ್ದದಂತೆ ಕೇಳಿಸುತ್ತದೆ.  ಸಾಮಾನ್ಯವಾಗಿ ಬಲಮುರಿ ಶಂಖವನ್ನು ದೇವರಪೂಜೆಯಲ್ಲಿ ಅಭಿಷೇಕ ಮಾಡುವುದಕ್ಕೆ ಉಪಯೋಗಿಸಲಾಗುತ್ತದೆ. ಹಾಗೆಯೇ ಎಡಮುರಿ ಶಂಖವನ್ನು ಪೂಜೆಯ ಆರಂಭ, ಅಭಿಷೇಕ ಹಾಗು ಮಂಗಳಾರತಿಯ ಸಮಯಗಳಲ್ಲಿ ಊದಲು  ಉಪಯೋಗಿಸಲಾಗುತ್ತದೆ.  

ಒಳ್ಳೆಯ ಶಂಖದಿಂದ ಬರುವ ನಾದವು ಕಂಠದ ಮೂಲಕ ಓಂಕಾರವನ್ನು ಹೇಳಿದ ಹಾಗೆ ಕೇಳಿಸುತ್ತದೆ. ಶಂಖವನ್ನುಸ್ಪಷ್ಟವಾಗಿ ಊದಬೇಕಾದರೆ ಊದುವವನು ಚೆನ್ನಾಗಿ ಉಸಿರೆಳೆದು ಹಿಡಿದುಕೊಂಡು ತುಟಿಗಳನ್ನು ಶಂಖದ  ಮುಂದಿರುವ ತೂತಿಗೆ ಅಳವಡಿಸಿ ಅದರ ಜೊತೆಗೆ ತುಟಿಗಳ ಕಂಪನದ ಜೊತೆಗೆ ನಿಧಾನವಾಗಿ ಉಸಿರನ್ನು ತೂತಿನಲ್ಲಿ ಬಿಡಬೇಕು.ಆಗ ಶಂಖವು ಊದುವವನ ತುಟಿಗಳ ಕಂಪನದ ಸಣ್ಣದಾದ ಶಬ್ದವನ್ನು ಸ್ಪಂದಿಸಿ ಬಹಳವಾಗಿ ದೊಡ್ಡದಾಗಿಸುತ್ತದೆ. ಅದರಿಂದ ದೊಡ್ಡದಾದ ಶಂಖನಾದ ಕೇಳಿಸುತ್ತದೆ. ಶಂಖದಿಂದ ಬರುವ ನಾದವು ಬಹಳ ಸ್ವಾರಸ್ಯಕರ. ಹೇಗೆಂದರೆ ಕಂಪಿತಗೊಂಡ ಊದಿದ ಉಸಿರು ಶಂಖದ ಒಳಗಿನ ಸುತ್ತು ಬಳಸಿದ ಪಥದಲ್ಲಿ ಚಲಿಸಿ ಏಕಕಂಪನದಿಂದ ಮಾಧುರ್ಯತೆ ತುಂಬಿ ಹೊರಬರುತ್ತದೆ. ಹೊರಬಂದ ಏಕಕಂಪನಗಳನ್ನು 
ಚಿತ್ರ ೨ ರಲ್ಲಿ ಚೆನ್ನಾಗಿ ನೋಡಬಹುದು. 







ಹಾಗೆಯೇ ಶಂಖದ ಒಳಗಿನ ಸುತ್ತು ಬಳಸಿಕೆಯನ್ನು ಚಿತ್ರ ೩ ರಲ್ಲಿ ಚೆನ್ನಾಗಿ ನೋಡಬಹುದು. ಈ ಏಕಕಂಪನದಿಂದ ಹೊರಬಂದ ಮಧುರ ನಾದವು ಮನಸ್ಸಿನ ಏಕಾಗ್ರತೆಗೆ ಕಾರಣವಾಗುತ್ತದೆ. ಆದರಿಂದಲೇ ಒಳ್ಳೆಯ ಶಂಖದಿಂದ ಬಂದ  ನಾದವನ್ನು ಶುದ್ಧವಾದ ನಾದವೆನ್ನುವುದು.ಸಂಗೀತ ಪ್ರಪಂಚದಲ್ಲಿಯೂ  ಶಂಖವನ್ನು ಒಂದು ವಾಯುವಾದ್ಯವೆಂದು ಪರಿಗಣಿಸಲಾಗಿದೆ. ಮತ್ತೊಂದು ಮುಖ್ಯವಾದ ಅಂಶವೇನೆಂದರೆ ಶಂಖವನ್ನು ಚೆನ್ನಾಗಿ ಊದುವುದನ್ನು ಅಭ್ಯಾಸ ಮಾಡಿದರೆ ಊದುವವರಿಗೆ ಒಂದುರೀತಿಯ ಪ್ರಾಣಾಯಾಮದ ಅಭ್ಯಾಸವೂ ಆಗುತ್ತದೆ. ಹೇಗೆಂದರೆ ಊದುವ ಮುನ್ನ ಉಸಿರನ್ನು ಚೆನ್ನಾಗಿ ಒಳಗೆ ತೆಗೆದುಕೊಂಡು ನಂತರ ಶಂಖದ ಮೂಲಕ ಬಹಳ ನಿಧಾನವಾಗಿ ಬಿಡಬೇಕು. ಇದನ್ನು ಅಭ್ಯಾಸ ಬಲದಿಂದಲೇ ಸಾಧಿಸಬೇಕು.

ಸಾರಾಂಶ:

ಒಟ್ಟಿನಲ್ಲಿ ಶಂಖ ಹಾಗು ಶಂಖನಾದವನ್ನು ಭಾರತೀಯ ಸಂಸ್ಕೃತಿಯಲ್ಲಿ ಮಂಗಲವನ್ನುಂಟುಮಾಡುವ ಸಾಧನವನ್ನಾಗಿ  ಉಪಯೋಗಿಸಲಾಗುತ್ತಿದೆ. ಶಂಖದಿಂದಬರುವ ಏಕಕಂಪನದ ನಾದವು ಬಹಳ ದೂರದವರೆಗೆ ಪ್ರಸಾರಗೊಳ್ಳುತ್ತದೆ. ಆದ್ದರಿಂದಲೇ ಶಂಖವನ್ನು ಊದುವವರಲ್ಲೂ ಹಾಗು ಶ್ರೋತೃಗಳಲ್ಲೂ ಏಕಾಗ್ರತೆಯನ್ನು ತರುತ್ತದೆ.


ಸೂಚನೆ: 04/05/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.