Sunday, October 27, 2019

ಲೋಕಹಿತ (Lokahitha)

ಲೇಖಕರು:  ವಿದ್ವಾನ್  ಎನ್. ಎನ್.ಚಂದ್ರಶೇಖರಭಟ್ಟ



ದೇವನೊಂದಿಗೆ ಸೇರಿ ಬಾಳುವುದರಿಂದ ಸೃಷ್ಟಿವ್ಯಾಪಾರ ಸುಗಮವಾಗುತ್ತದೆ. ಇದನ್ನೇ ದಿವಿ-ಭುವಿಗಳ ಸಂಗಮವೆನ್ನುತ್ತಾರೆ. ಈ ಸಂಗಮ ತಪ್ಪಿದಾಗ ಲೋಕದಲ್ಲಿ  ಅನಾಹುತಗಳು ತಪ್ಪಿದ್ದಲ್ಲ. ಮನುಷ್ಯ ಯಾವಾಗ ನಾನು ಸರ್ವಸಮರ್ಥ, ನನ್ನ ಮುಂದೆ ಯಾರೂ ನಿಲ್ಲಲಾರರು ಎಂದು ಭಾವಿಸುತ್ತಾ ರಾಕ್ಷಸೀಪ್ರವೃತ್ತಿಯಿಂದ ಮೆರೆಯುತ್ತಾನೋ ಆಗ ದೈವವು "ಹೋಗು, ನಿನ್ನಂತೆ ಇರು" ಎಂದು ಸುಮ್ಮನಾಗುತ್ತದೆ. ಅದಿಲ್ಲದೆ "ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ, ಅದನ್ನು ಆಗಿಸುವ ಜವಾಬ್ದಾರಿ ನಿನ್ನದು" ಎಂದು "ಪಂಚಮಂ ದೈವಚಿಂತನಮ್" ಎಂದು ದೈವಕ್ಕೆ ತನ್ನನ್ನು ಕೊಟ್ಟುಕೊಂಡುಬಿಡುತ್ತಾನೋ ಆಗ ದೈವವು ತನ್ನ ಕೈನೀಡಿ ಸಹಕರಿಸುತ್ತದೆ.

 ಮಹಾಕವಿ ಕಾಳಿದಾಸನು ದೈವ-ಮಾನುಷ ಸಂಬಂಧವನ್ನು ಬಹಳ ಸುಂದರವಾಗಿ, ತನ್ನ ರಘುವಂಶ ಮಹಾಕಾವ್ಯದಲ್ಲಿ ವರ್ಣಿಸಿದ್ದಾನೆ. ದಿಲೀಪಮಹಾರಾಜನು ತನ್ನ ಪ್ರಜೆಗಳ ಮೂಲಕ ಭೂಮಿಯನ್ನು ಉತ್ತಿ,ಬಿತ್ತಿ, ಬೆಳೆಸಿ ಬಂದ ಫಲವನ್ನು ದೈವಕ್ಕೆ ನಿವೇದಿಸಿ ಅನಂತರ ತನ್ನ ಪ್ರಜೆಗಳಲ್ಲಿ ವಿತರಿಸಿದನಂತೆ. ಹಾಗೆ ಇವನ ನಿವೇದನವನ್ನು ಸ್ವೀಕರಿಸಿದ ಇಂದ್ರನು ತಾನು ಮಳೆಗರೆದು, ಭೂಮಿಯು ಸಸ್ಯಸಮೃದ್ಧವಾಗುವಂತೆ, ಧನಧಾನ್ಯಸಮೃದ್ಧವಾಗುವಂತೆ ಮಾಡಿದನಂತೆ. ಹೀಗೆ ರಾಜಾ-ಇಂದ್ರರು ಇಬ್ಬರೂ ಹೊಂದಾಣಿಕೆಯಿಂದ ಎರಡೂ ಲೋಕಗಳನ್ನು ಭರಣಮಾಡಿದರಂತೆ!
 ಇಂದು ಪ್ರಪಂಚದಲ್ಲಿ  ಅತಿವೃಷ್ಟಿ, ಅನಾವೃಷ್ಟಿ, ಅತ್ಯಾಚಾರ, ಅನಾಚಾರ ಇತ್ಯಾದಿಗಳನ್ನು ಕಾಣುತ್ತೇವೆಯೋ, ಇವೆಲ್ಲವೂ ಮಾನವನ ಅಜ್ಞಾನದ, ಅವಿವೇಕದ, ಅಹಂಕಾರದ, ಉದ್ಧಟತನದ, ದ್ವೇಷಾಸೂಯೆಗಳ ಫಲ. ಇವನ್ನು ಬಿಟ್ಟು ಕಬೀರವಾಣಿಯಂತೆ-

"ಹೇ ಸ್ವಾಮೀ, ನನಗೆ ನನ್ನ ಪರಿವಾರವನ್ನು ಸಾಕಿ ಸಲಹಲು ಬೇಕಾಗುವಷ್ಟು-ಸಾಕಾಗುವಷ್ಟು ಸಂಪತ್ತನ್ನು ಮಾತ್ರ ಕೊಡು, ಅದಕ್ಕಿಂತ ಹೆಚ್ಚಿಗೆ ಬೇಡ. ಕಾರಣ ನನ್ನ ಕುಟುಂಬ ಹಸಿದಿರಬಾರದು. ಜೊತೆಗೆ ಅದಕ್ಕಿಂತ ಹೆಚ್ಚಿಗೆ ನನ್ನಲ್ಲಿ ಸಂಪತ್ತು ಸಂಗ್ರಹವಾದರೆ ಅದು ನನ್ನದಲ್ಲ, ಇನ್ನೊಬ್ಬರದು. ಅವರ ಸಂಪತ್ತನ್ನು ನಾನು ಅಪಹರಿಸಿ, ಅವರು ಹಸಿವಿನಿಂದ ನರಳುವಂತಹ ತಪ್ಪು ನಡೆಯಬಾರದು”. ಆತ್ಮಗುಣಗಳಲ್ಲಿ "ಅಪರಿಗ್ರಹ" ಎಂಬುದೂ ಒಂದು. ಎಂದರೆ ಇನ್ನೊಬ್ಬರ ಸಂಪತ್ತಿಗೆ ಆಸೆಪಡದಿರುವುದು- ಅಪಹರಿಸದಿರುವುದು. ಇಂತಹ ಆತ್ಮಗುಣ ನಮ್ಮಲ್ಲಿ ಬೆಳೆಯುವಂತೆ ಆಗಬೇಕು.
 ಭಗವಂತನು ಕೊಟ್ಟದ್ದನ್ನು ಅವನಿಗೆ ಸಮರ್ಪಣೆ ಮಾಡಿ ಅದನ್ನು ಅವನ ಪ್ರಸಾದವಾಗಿ ಉಪಭೋಗಿಸುವುದು ನಮ್ಮ ಸಂಸ್ಕೃತಿಯ ಹಿರಿಮೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು

"ಇಷ್ಟಾನ್ಭೋಗಾನ್ಹಿವೋದೇವಾದಾಸ್ಯಂತೇಯಜ್ಞಭಾವಿತಾಃ|
ತೈರ್ದತ್ತಾನಪ್ರದಾಯೈಭ್ಯೋಯೋಭುಂಕ್ತೇಸ್ತೇನಏವಸಃ||"

 ಭಗವಂತನ ಪೂಜೆಯನ್ನು ಮಾಡಿ, ಅವನ ಭಾವವನ್ನು ತುಂಬಿಕೊಂಡಾಗ ಅವನು ನಮ್ಮ ಇಷ್ಟವಾದ ಭೋಗಗಳನ್ನು ಕೊಡುತ್ತಾನೆ. ಹಾಗೆ ಅವನು ಅನುಗ್ರಹಿಸಿ ಕೊಟ್ಟಿದ್ದನ್ನು  ಅವನ ಪ್ರಸಾದವೆಂದು ಭಾವಿಸಿ, ಅವನಿಗೆ ಸಮರ್ಪಿಸದೇ ಒಂದು ವೇಳೆ ಉಪಭೋಗಿಸಿದರೆ ಅದು ಕಳ್ಳತನವಾಗುತ್ತದೆ.

“ನಮ್ಮ ಮನೋರಥಗಳೆಷ್ಟೇ ಇರಲಿ. ಅವುಗಳೆಲ್ಲದರ ಮೇಲೆ ಭಗವಂತನನ್ನು ಕೂಡಿಸಿ ನಮ್ಮ ಜೀವನರಥವನ್ನು ಎಳೆಯುವುದಾದರೆ, ಆತ್ಮ-ಕಲ್ಯಾಣ,ಲೋಕ-ಕಲ್ಯಾಣ ಎರಡೂ ಸಿದ್ಧಿಸುತ್ತವೆ” ಎಂಬ ಶ್ರೀರಂಗಮಹಾಗುರುಗಳ ಅಮೃತವಾಣಿ ಇಲ್ಲಿ ಸ್ಮರಣೀಯ.

 ಆದ್ದರಿಂದ ಸೃಷ್ಟಿಯಲ್ಲಿ ನಡೆಯುವ ಅನಾಹುತಗಳನ್ನು- ಏರುಪೇರುಗಳನ್ನು ತಪ್ಪಿಸಲು ದಿವಿ-ಭುವಿಗಳ ಸಹಜ ಸಂಗಮವಾಗಬೇಕು.


ಸೂಚನೆ:  27/10/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.