Wednesday, January 1, 2020

ಪಾಕಶಾಲೆ ಮತ್ತು ಒಲೆ (Paakashaale mattu ole)

ಲೇಖಕರು:  ತಾರೋಡಿ ಸುರೇಶ
(ಪ್ರತಿಕ್ರಿಯಿಸಿರಿ lekhana@ayvm.in)


ಒಂದು ಯಂತ್ರವಾದರೂ ಅದರಲ್ಲಿ ಚಿಕ್ಕಪುಟ್ಟ ನೆಟ್, ಬೋಲ್ಟಗಳೂ ಸರಿಯಾಗಿರಬೇಕಾಗುವುದು ಅತ್ಯವಶ್ಯ. ಹಾಗಿದ್ದಲ್ಲಿ ಯಂತ್ರದ ಒಟ್ಟು ಉದ್ದೇಶ ಫಲ ನೀಡುವುದು. ಎಲ್ಲವೂ ಸರಿಯಾಗಿದ್ದಲ್ಲಿ ಮಾತ್ರ ಯಂತ್ರವು ಒಂದು ಸುಸ್ಥಿತಿಯಲ್ಲಿರಬಹುದು. ಅದೇ ರೀತಿ ಈ ಪಾಕದ ಅಳವಡಿಕೆಯನ್ನು ಋಷಿಗಳು, ಅದರ ಯಾವ ಅಂಗವನ್ನೂ ಉಪೇಕ್ಷಿಸದೆ ಸಮಗ್ರವಾಗಿ ರೂಪಿಸಿ ಕೊಟ್ಟಿದ್ದಾರೆ.
ಅವರ ಈ ದೃಷ್ಟಿಯನ್ನು ಅಡುಗೆಮನೆಯ ಎಡೆಯನ್ನು ಅವರು ನಿರ್ಧರಿಸಿರುವುದರ ಮೇಲೆಯೇ ನಾವು ತಿಳಿಯಬಹುದು. ಪಾಕಶಾಲೆಯು ಪೂಜಾಗೃಹಕ್ಕೆ ಹೊಂದಿಕೊಂಡಿರಬೇಕು. ಪಾಕವು ತಯಾರಾದ ನಂತರ ಅದು ಮೊಟ್ಟಮೊದಲನೆಯದಾಗಿ ಭಗವನ್ನಿವೇದಿತವಾಗಬೇಕಲ್ಲವೆ? ಆದ್ದರಿಂದ ಅಡುಗೆಯು ಮೊದಲಿಗೆ ಪೂಜಾಗೃಹಕ್ಕೆ ಸಾಗಬೇಕೇ ಹೊರತು ಭೋಜನಶಾಲೆಗಲ್ಲ. ನಿವೇದನೆಯಾಗಿ ಅದು ಪ್ರಸಾದವಾದ ನಂತರವಷ್ಟೆ ಭೋಜನಶಾಲೆಯನ್ನು ತಲುಪುವುದು.

ಎರಡನೆಯದಾಗಿ ಒಲೆಯು ಆಗ್ನೇಯ(south-east) ಮೂಲೆಯಲ್ಲಿರಬೇಕೆಂಬ ವಿಧಿಯಿದೆ. ಯಾವ ಮೂಲೆಯಲ್ಲಿ ಒಲೆಯನ್ನು ಇಟ್ಟರೂ ಅಡುಗೆ ಮಾಡಲು ತೊಂದರೆಯೇನಿಲ್ಲ. ಆದರೆ ಅಗ್ನಿದೇವತೆಯ ಸಹಜ ಹರಿಯುವಿಕೆ ಮತ್ತು ನೆಲೆ ಎರಡೂ ಅಗ್ನಿಮೂಲೆಯಾಗಿದೆ. ನಿಸರ್ಗದಲ್ಲಿ ಸಹಜವಾಗಿಯೂ, ರಹಸ್ಯವಾಗಿಯೂ ಇರುವ ಶಕ್ತಿಗಳ ಪರಿಚಯವುಳ್ಳವರು ಮಾತ್ರ ಈ ರೀತಿಯಾದ ಯೋಜನೆ ಮಾಡಬಲ್ಲವರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಒಲೆ ಆಗ್ನೇಯದಲ್ಲಿರಬೇಕು. ಆಗ ಸಹಜವಾಗಿಯೇ ಆಗ್ನಿದೇವತೆಯ ಅನುಗ್ರಹವೂ ಹರಿಯುವುದು. ಹೊರಗೆ ಭೌತಿಕ ರೂಪದಲ್ಲಿ ಬೆಂಕಿಯನ್ನು ನೋಡಿದಾಗಲೂ ಅದರ ಮೂಲರೂಪವಾದ ಅಗ್ನಿದೇವತೆಯತ್ತ ಮನಸ್ಸು ಹರಿಯಲು ಅಡ್ಡಿಯಿರುವುದಿಲ್ಲ. ಸ್ಥೂಲದಿಂದ ಸೂಕ್ಷ್ಮಕ್ಕೆ  ನಯನಮಾಡಿಸುವ ಕೌಶಲವೂ ಇಲ್ಲುಂಟು.
ಒಲೆಯ ರಚನಾವಿನ್ಯಾಸದಲ್ಲಿಯೂ ಮಹರ್ಷಿಗಳ ಕೌಶಲ್ಯವನ್ನು ಕಾಣಬಹುದು. ಇತ್ತೀಚೆಗೆ ಅಂತಹ ಒಲೆಗಳೂ ವಿರಳ. ಹಿಂದೆ ಒಲೆಯನ್ನು ಮಾಡುವಾಗ ಒಲೆಯ ಹಿಂಭಾಗದಲ್ಲಿ ಒಂದು ಮತ್ತು ಮುಂದೆ ಎರಡು ಗುಪ್ಪುಗಳಿರುತ್ತಿದ್ದವು. ಆ ಮೂರೂ ಗುಪ್ಪುಗಳನ್ನು ನೋಡಿದಾಗ ತ್ರಿಕೋಣಾಕೃತಿಯು ಕಂಡುಬರುತ್ತದೆ. ಅಂತೆಯೇ ದೊಡ್ಡ ಅಡುಗೆಯಲ್ಲಿ ಮೂರು ಕಲ್ಲುಗಳನ್ನು ಮೇಲಿನಂತೆ ತ್ರಿಕೋಣಾಕೃತಿಯಲ್ಲಿಟ್ಟು ಅಡುಗೆ ಮಾಡುವ ಅಭ್ಯಾಸ ಇಂದಿಗೂ ಬಳಕೆಯಲ್ಲಿದೆ. ಪಾತ್ರೆಗಳನ್ನು ಇಡಲು ಅನುಕೂಲ ಎನ್ನುವುದು ಸ್ಥೂಲವಾದ ಲಾಭ.ಆದರೆ ಇದರ ಆಳವಾದ ಹಿನ್ನೆಲೆಯನ್ನು ಶ್ರೀರಂಗಮಹಾಗುರುಗಳು ಹೀಗೆ ವಿವರಿಸಿದ್ದರು.  

ವಿಶ್ವಮೂಲವಾದ ಶಕ್ತಿಯನ್ನು ಬಿಂದು ಎಂಬುದಾಗಿ ಕರೆಯುವುದುಂಟು. ಅದೇ ಪರಮಾತ್ಮ ಸ್ವರೂಪ. ಅದು ಮುಂದೆ ವಿಶ್ವರೂಪವಾಗಿ ಅರಳುವಾಗ ತನ್ನನ್ನೇ ಬಿಂದು ಮತ್ತು ವಿಸರ್ಗರೂಪವಾಗಿ ವಿಸ್ತಾರಗೊಳಿಸಿಕೊಳ್ಳುತ್ತದೆ. ಮೊದಲು ಬಿಂದು. ನಂತರ ಸೃಷ್ಟಿವಿಸ್ತಾರಕ್ಕಾಗಿ ತಾನು ಮತ್ತು ಪ್ರಕೃತಿ. ಈ ಮೂರನ್ನು ನೋಡಿದಾಗ ಸೃಷ್ಟಿಮೂಲಶಕ್ತಿಯಾದ ಭಗವಂತ ಮತ್ತು ಅದರ ವಿಕಾಸವನ್ನೂ ಜ್ಞಾಪಿಸುತ್ತವೆ. ಹೀಗೆ ಒಲೆಯ ವಿನ್ಯಾಸದಲ್ಲಿಯೇ ತತ್ವಾರ್ಥವನ್ನಿಟ್ಟು ಜೀವಿಯು ತನ್ನ ಮೂಲವನ್ನು ಮರೆಯದಂತೆ ಮಾಡುವ ಕುಶಲತೆ ಪರಮಾದ್ಭುತವಾಗಿದೆ.


ಸೂಚನೆ: 31/12/2019 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.