Sunday, February 9, 2020

ಭೋಜನ ಸ್ವೀಕರಿಸಲು ಬೇಕಾದ ಕಾರಣ. (Bhojana sveekarisalu bekaada kaarana)

ಲೇಖಕರು: ವಿದ್ವಾನ್  ಬಿ. ಜಿ.ಅನಂತ.
(ಪ್ರತಿಕ್ರಿಯಿಸಿರಿ : lekhana@ayvm.in)


ಭೋಜನ ಎಂಬುದು ಅವರವರ ಅಭಿರುಚಿ ಮತ್ತು ಸೌಲಭ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಹಾಗಿದ್ದರೂ ಭಾರತೀಯ ಶಾಸ್ತ್ರಗಳು ಈ ಬಗ್ಗೆ ಅನೇಕ ವಿಧಿ-ನಿಷೇಧಗಳನ್ನು ಹೇಳಿದೆ. ಅದರಲ್ಲಿ ಯಾರ ಅನ್ನವನ್ನು ಬಳಸಬೇಕು, ಯಾರ ಅನ್ನವನ್ನು ಬಳಸಬಾರದು, ಯಾವ ಸಂದರ್ಭದಲ್ಲಿ ಬಳಸಬಹುದು ಇತ್ಯಾದಿ ವಿಷಯಗಳು ಸೇರಿವೆ. ಈ ಬಗ್ಗೆ  ಮಹಾಭಾರತ್ದಲ್ಲಿ ಒಂದು ಸ್ವಾರಸ್ಯವಾದ ಕಥೆಯಿದೆ.

ಪಾಂಡವರು ವನವಾಸವನ್ನು ಮುಗಿಸಿ ಬಂದ ನಂತರ ಅವರಿಗೆ ನ್ಯಾಯವಾಗಿ ಕೊಡಬೇಕಾಗಿದ್ದ ರಾಜ್ಯವನ್ನು ಕೊಡಲು ದುರ್ಯೋಧನನು ನಿರಾಕರಿಸುತ್ತಾನೆ. ಆಗ ಯುದ್ಧವೇ ಅನಿವಾರ್ಯ ಎಂಬ ಪರಿಸ್ಥಿತಿ ಬಂದೊದಗುತ್ತದೆ. ಯುದ್ಧದಿಂದ ಆಗುವ ಸಾವು-ನೋವುಗಳನ್ನು ಮನಗಂಡ ಧರ್ಮರಾಯನು ಯುದ್ಧವನ್ನು ಬಿಟ್ಟು ಬೇರೆ  ಮಾರ್ಗದಿಂದ ರಾಜ್ಯವನ್ನು ಪಡೆಯಲು ಸಾಧ್ಯವೇ ಎಂದು ಯೋಚಿಸುತ್ತಾನೆ. ಸಂಧಾನಕ್ಕಾಗಿ ಶ್ರೀ ಕೃಷ್ಣನನ್ನು ತನ್ನ ದೂತನನ್ನಾಗಿ ಕಳುಹಿಸುತ್ತಾನೆ. ಸಂತೋಷದಿಂದ ಒಪ್ಪಿದ ಶ್ರೀ ಕೃಷ್ಣನು ಹಸ್ತಿನಾವತಿಯ ಕಡೆಗೆ ಪ್ರಯಾಣ ಬೆಳೆಸುತ್ತಾನೆ. ಶ್ರೀ ಕೃಷ್ಣನ ಆಗಮನವನ್ನೂ ಅದರ ಉದ್ದೇಶವನ್ನೂ ಅರಿತ ಕೌರವನು ಶ್ರೀ ಕೃಷ್ಣನನ್ನು ಆತಥ್ಯದಿಂದ ಸಂಪ್ರೀತಿಗೊಳಿಸಿ ಅವನನ್ನೇ ತಮ್ಮ ಕಡೆಗೆ ಸೆಳೆದುಕೊಳ್ಳಲು ಯೋಚಿಸುತ್ತಾನೆ. ಅದಕ್ಕಾಗಿ ಕೃಷ್ಣನಿಗೆ ಪ್ರಿಯವಾದ ಬಗೆ ಬಗೆಯ ಪದಾರ್ಥಗಳನ್ನು ಭೋಜನಕ್ಕಾಗಿ ಸಿದ್ಧಪಡಿಸಲಾಗುತ್ತದೆ. ಆದರೆ ಭಕ್ತಪ್ರಿಯನೂ ಸರಳನೂ ಆದ ಭಗವಂತನು ನೇರವಾಗಿ ತನ್ನ ಅಂತರಂಗದ ಭಕ್ತನಾದ ವಿದುರನ ಮನೆಗೆ ದಯಮಾಡಿಸುತ್ತಾನೆ.

ಅಲ್ಲಿ ಬಹಳ ಪ್ರೀತಿಯಿಂದ ವಿದುರನು ಸಮರ್ಪಿಸಿದ ಹಾಲು ಹಣ್ಣುಗಳನ್ನು ಸ್ವೀಕರಿಸಿ ಸಂತೃಪ್ತನಾಗುತ್ತಾನೆ. ಮಾರನೆಯ ದಿವಸ ಕೌರವನ ಸಭೆಗೆ ಪಾಂಡವರ ದೂತನಾಗಿ ದಯಮಾಡಿಸುತ್ತಾನೆ. ಆಗ ಹಿಂದಿನ ದಿವಸ ಶ್ರೀ ಕೃಷ್ಣನ ಆತಿಥ್ಯಕ್ಕಾಗಿ ನಡೆಸಿದ್ದ ಸಿದ್ಧತೆಯನ್ನು ತಿಳಿಸುತ್ತಾ ಕೌರವನು ಶ್ರೀ ಕೃಷ್ಣನನ್ನು ಹೀಯಾಳಿಸುತ್ತಾನೆ. ನೀನು ಎಷ್ಟಾದರೂ ನೀಚ ಕುಲದವನು. ಆದ್ದರಿಂದಲೇ ನಿನಗೆ ಸಮಾನನಾದ ಅಲ್ಪನಾದ ವಿದುರನಲ್ಲಿ ಆಥಿತ್ಯವನ್ನು ಸ್ವೀಕರಿಸಿದೆ.  ಸರಿಯಾಯಿತು ಬಿಡು. ನಿನಗೆ ರಾಜಯೋಚಿತವಾದ ಭೋಜನವಾದರೂ ಏಕೆ? ಎಂದು. ಅದಕ್ಕೆ ಶ್ರೀ ಕೃಷ್ಣನು ಕೊಡುವ ಉತ್ತರವು ಬಲು ಸೊಗಸಾಗಿದೆ. ಎಲೈ ದುರ್ಯೋಧನನೇ ಯಾರಾದರೂ ಪ್ರೀತಿಯಿಂದ ಕೊಟ್ಟ ಅನ್ನವನ್ನು ಮಾತ್ರವೇ ಸ್ವೀಕರಿಸಬೇಕು. ಅಥವಾ ಪ್ರೀತಿಯಿಂದ ಕೊಡದಿದ್ದರೂ ನಾವು ಆಪತ್ತಿನಲ್ಲಿದ್ದರೆ ಆಗ ದೊರಕುವ ಅನ್ನವನ್ನು ಬಳಸಬಹುದು. ಆದರೆ ನೀನೇನೂ ಪ್ರೀತಿಯಿಂದ ನಮ್ಮನ್ನು ಆದರಿಸಲೂ ಇಲ್ಲ. ಆದರವಿಲ್ಲದಿದ್ದರೂ ಭುಂಜಿಸುವ ಅನಿವಾರ್ಯತೆಯೂ ನನಗೆ ಇರಲಿಲ್ಲ.

ಶ್ರೀ  ಕೃಷ್ಣನ ಮಾತುಗಳು ಎಷ್ಟೊಂದು ಸರ್ವಕಾಲಿಕವಾಗಿದೆಯಲ್ಲವೇ.   

ಸೂಚನೆ: 08/02/2020 ರಂದು ಈ ಲೇಖನ ಉದಯವಾಣಿ ಬಹುಮುಖಿ ಅಂಕಣದಲ್ಲಿ ಪ್ರಕಟವಾಗಿದೆ