Saturday, February 22, 2020

ಸ್ವಾಸ್ಥ್ಯದ ಅಂತರಾರ್ಥ (Svasthyada Antarartha)

ಲೇಖಕರು: ಡಾII ಯಶಸ್ವಿನೀ
ಆಯುರ್ವೇದ ವೈದ್ಯೆ
(ಪ್ರತಿಕ್ರಿಯಿಸಿರಿ lekhana@ayvm.in)



ಸ್ವಾಸ್ಥ್ಯ ಎಂದರೆ ಆರೋಗ್ಯವಾಗಿರುವುದು ಎಂಬುದು ಸಾಮಾನ್ಯವಾದ ಅರ್ಥವಾಗಿರುತ್ತದೆ. ನೀರೋಗಃ ಆರೋಗ್ಯಃ | ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೈಹಿಕ ಹಾಗು ಮಾನಸಿಕವಾಗಿ ರೋಗ ಮುಕ್ತರಾಗಿ ಇರುವವರೇ ಸ್ವಸ್ಥರು. ಖಂಡಿತವಾಗಿಯೂ ಸತ್ಯದ ವಿಚಾರ. ನಮ್ಮ ಭಾರತದ ಋಷಿಮಹರ್ಷಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಶೋಧಿಸಿ ನಿರ್ಣಯಿಸಿದ ವಿಚಾರವೇನೆಂಬುದನನ್ನು ಒಮ್ಮೆ ಅವಲೋಕಿಸೋಣ. ಒಬ್ಬ ಜೀವಿಯು ನಾಲ್ಕು ಅಂಶಗಳಿಂದ ಕೂಡಿದವನಾಗಿರುತ್ತಾನೆ.

ಶರೀರೇಂದ್ರಿಯ ಸತ್ವಾತ್ಮ ಸಂಯೋಗೋಧಾರಿ ಜೀವಿತಂ |
ನಿತ್ಯಗಶ್ಚಾನುಬಂದಾಶ್ಚ ಪರ್ಯಾಯೈರಾಯುರುಚ್ಯತೆ ||

ಶರೀರ, ಇಂದ್ರಿಯ, ಮನಸ್ಸು, ಆತ್ಮ ಎಂಬುದೇ ಈ ನಾಲ್ಕು ಅಂಶಗಳು. ಇವುಗಳ ಸಾಮರ್ಥ್ಯ ಹಾಗೂ ವ್ಯಾಪ್ತತೆಯ ಅರಿವಿಗಾಗಿ ಒಂದು ಚಟುವಟಿಕೆ ಮಾಡೋಣ. ಒಂದು ಕೊಠಡಿಯಲ್ಲಿ ನಾವು ಬಂಧಿಯಾಗಿ ಕುಳಿತಿದ್ದೀವೆ ಎಂದೊಮ್ಮೆ ಭಾವಿಸೋಣ. ಶರೀರವು ತನ್ನ ಸಂಬಂಧಿಯಾದ ಹಾಗು ತನ್ನ ಸಂಪರ್ಕಕ್ಕೆ ಬಂದದ್ದನ್ನು ಮಾತ್ರ ಗ್ರಹಿಸಬಸಬಲ್ಲದು. ಉದಾಹರಣೆಗೆ, ಶೆಖೆ/ಚಳಿ ಅನುಭವ ಗ್ರಹಿಸಬಲ್ಲದು. ಹಸಿವೆ, ಬಾಯಾರಿಕೆ, ನಿದ್ರೆ, ಮಲ ಮೂತ್ರಾದಿ ವೇಗಗಳನ್ನು ಗ್ರಹಿಸಬಲ್ಲದು. ಇಂದ್ರಿಯವು ಅದರ ಮಿತಿಗೆ ಅನುಸಾರ, ಕೊಠಡಿಯ ವ್ಯಾಪ್ತಿಯೊಳಗಿರುವುದನ್ನು ಗ್ರಹಿಸಬಲ್ಲದು. ಮನಸ್ಸು, ಕೊಠಡಿ ವ್ಯಾಪ್ತಿಯ ಮೀರಿ, ಊಹಾ ಪೋಹಾದಿಗಳಿಂದ ತಿಳುವಳಿಕೆಯ ಆಧಾರದ ಮೇಲೆ ಇಂದ್ರಿಯಗಳಿಗಿಂತ ಅಧಿಕವಾಗಿ ಗ್ರಹಿಸಬಲ್ಲದು. ಆತ್ಮವು, ನಿತ್ಯ ಹಾಗು ಏಕತ್ವಗುಣವನ್ನು ಹೊಂದಿರುವಂತಹದ್ದು. ಅದಕ್ಕೆ ಪರಿಮಿತಿ ಇಲ್ಲ. ಈ ಆತ್ಮ ಎಲ್ಲಾ ವ್ಯಾಪ್ತಿ ಗಳನ್ನೂ ಮೀರಿ, ಪರಂ-ಆತ್ಮದ (ಪರಮಾತ್ಮನ/ಜ್ಞಾನದ) ಅನುಭವವನ್ನೇ ಪಡೆಯಬಲ್ಲದ್ದು. ಈ ನಾಲ್ಕರ ಸಮಂಜಸವಾದ ಸಹಕಾರ ಇದ್ದಾಗ ಉಂಟಗುವುದೇ ಸ್ವಾಸ್ಥ್ಯ ಎಂದು ಆಯುರ್ವೇದ ಶಾಸ್ತ್ರದ ಆರೋಗ್ಯ ಸೂತ್ರ.


ಈ ನಾಲ್ಕರಲ್ಲಿ ಒಗ್ಗಟ್ಟು ಏರ್ಪಡಲು ಏನು ಮಾಡಬೇಕು?  ಚರಕರು ಹೇಳುವಂತೆ, ಸದಾ ಸುಖಕರವಾದ ಚಿಂತನೆ ಮಾಡುತ್ತಾ, ಒಳ್ಳೆಯ ಮಾತುಗಳನ್ನಾಡುತ್ತಾ, ಸತ್ವ ವೃದ್ಧಿ ಕ್ರಿಯೆಗಳು, ಶುದ್ಧ ಜ್ಞಾನ, ತಪಸ್ಸು, ನಿರಂತರವಾದ ಯೋಗ ಸಾಧನೆಗಳನ್ನು ಯಾರು ಮಾಡುವರೋ, ಅವರಿಗೆ ರೋಗ ಬರುವುದಿಲ್ಲ. ನಾನು - ನಾನೆಂಬ ಅಹಂಕಾರ ತೊರೆದು 'ಎಲ್ಲರಲ್ಲೂ ಇರುವ ಆತ್ಮ ಆ ಪರಮಾತ್ಮನ ಅಂಶವೇ' ಎಂಬ ಭಾವ ನಮ್ಮದಾಗಬೇಕು. ಧಾತುಪ್ರಸಾದಾತ್ ಮಹಿಮಾನಮೀಶಂ – ಧಾತು ಪ್ರಸನ್ನತೆಯಿಂದ ಮಹಿಮವಂತನಾದ ಈಶನನ್ನು ಕಾಣಬಹುದಂತೆ. ಅದನ್ನೇ ಆಯುರ್ವೇದ ಶಾಸ್ತ್ರವು ಹೇಳುತ್ತಿದೆ. ಶ್ರೀರಂಗ ಮಹಾಗುರುಗಳು ಈ ವಿಚಾರವಾಗಿ ತಿಳಿಪಡಿಸಿದ್ದೇನೆಂದರೆ, ಸ್ವಾ- ಎಂದರೆ ಮೂಲತತ್ವ. ಪರಂಜೋತಿ. ಸ್ಥ- ಎಂದರೆ ಅದರಲ್ಲಿ ನೆಲೆ ನಿಂತವನು. ಆತನೇ ಸ್ವಸ್ಥ! ಎಂಬುದು ಅವರ ಸ್ಪಷ್ಠ ಅಭಿಪ್ರಾಯವಾಗಿತ್ತು. ಆಯುರ್ವೇದ ಶಾಸ್ತ್ರವು ಹೇಳುವ ಸ್ವಾಸ್ಥ್ಯದ ಸೂತ್ರದ ಗೂಡಾರ್ಥವೂ ಇದಾಗಿದೆ. ಸ್ವಾಸ್ಥ್ಯ ಹೊಂದಲು ಶರೀರದ ಎಲ್ಲಾ ಅಂಶಗಳೂ ಸಹಕರಿಸಬೇಕಾಗುತ್ತದೆ.

ಸಮದೋಷ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ |
ಪ್ರಸನ್ನಾತ್ಮೇಂದ್ರಿಯ ಮನಾಃ ಸ್ವಸ್ಥ ಇತ್ಯಭಿದೀಯತೇ ||

ದೋಷ(ವಾತ, ಪಿತ್ತ, ಕಫ) , ಅಗ್ನಿ, ಧಾತು, ಮಲ ಸಾಮ್ಯತೆಯನ್ನು ಹೊಂದಿರುವ ಒಡಲು, ಫೋಕಸ್ ಮಾಡಿರಿಸಿದಂತಹ ಲೆನ್ಸ್ ನಂತೆ. ಪರಂಜೋತಿಯ ಬೆಳಕಿನ ಅನುಭವವನ್ನು ಈ ಶರೀರರದಲ್ಲಿ ಹೊಂದಿದಾಗ ಪರಿಪೂರ್ಣ ಸ್ವಾಸ್ಥ್ಯ ಹೊಂದಬಹುದು.  ಇದರಿಂದ ಪರಮಾತ್ಮಾನುಭವದ  ಹೊಂಗಿರಣಗಳು ಮನಸ್ಸು, ಜ್ಞಾನೇಂದ್ರಿಯ, ಕರ್ಮೇಂದ್ರಿಯ ಹಾಗೂ ದೇಹದ ಕಣಕಣಕ್ಕೂ ತಲುಪುವಂತಾಗುತ್ತದೆ. ಗಾಢ ನಿದ್ರೆಯಿಂದ ದೇಹ, ಇಂದ್ರಿಯ, ಮನಸ್ಸು ಸುಖಿಸುವಂತೆ, ಪರಮಾತ್ಮನ ಅನುಭವವು ದೇಹೇಂದ್ರಿಯ ಮನಸ್ಸುಮಾತ್ರವಲ್ಲದೇ, ಆತ್ಮ ಪ್ರಸನ್ನತೆಯನ್ನೂ ಉಂಟುಮಾಡುವುದೇ ನಿಜವಾದ ಸ್ವಾಸ್ಥ್ಯ. ನಾವೆಲ್ಲರೂ ಆ ರೀತಿಯಾದ ಸ್ವಾಸ್ತ್ಯಪೂರ್ಣವಾದ ಬದುಕನ್ನು ಹೊಂದಲು ಪ್ರಯತ್ನಿಸೋಣ.

ಸೂಚನೆ: 22/02/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.